ಲಾಲಾ ಹಂಸ್ ರಾಜ್ (೧೯ ಏಪ್ರಿಲ್ ೧೮೬೪ - ೧೪ ನವೆಂಬರ್ ೧೯೩೮) ಅವರನ್ನು ಮಹಾತ್ಮ ಹಂಸ್ ರಾಜ್ ಎಂದೂ ಕರೆಯುತ್ತಾರೆ.ಅವರು ಒಬ್ಬ ಭಾರತೀಯ ಶಿಕ್ಷಣ ತಜ್ಞರು ಮತ್ತು ಆರ್ಯ ಸಮಾಜ ಚಳುವಳಿಯ ಸ್ಥಾಪರಾದ ಸ್ವಾಮಿ ದಯಾನಂದರ ಅನುಯಾಯಿಯಾಗಿದ್ದರು. ಗುರುದತ್ತ ವಿದ್ಯಾರ್ಥಿಯೊ೦ದಿಗೆ,೧೮೮೬ ರಲ್ಲಿ ದಯಾನಂದ ಆಂಗ್ಲ - ವೈದಿಕ ಶಾಲೆಗಳ ವ್ಯವಸ್ಥೆಯನ್ನು (ಡಿ ಎ ವಿ) ಲಾಹೋರ್‌ನಲ‍್ಲಿ ಸ್ಥಾಪಿಸಿದರು.ಅಲ್ಲಿ ಮೂರು ವರ್ಷಗಳ ಹಿಂದೆ ನಿಧನರಾಗಿದ್ದ ಸ್ವಾಮಿ ದಯಾನಂದರ ನೆನಪಿಗಾಗಿ ಮೊದಲ ಡಿ ಎ ವಿ ಶಾಲೆಯನ್ನು ಸ್ಥಾಪಿಸಲಾಯಿತು. ಅವರು ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತ್ ರಾಯ್ ಅವರ ದೇಶವಾಸಿಯಾಗಿದ್ದರು . ಹಂಸರಾಜ್ ಅವರು ೨೫ ವರ್ಷಗಳ ಕಾಲ ಡಿ ಎ ವಿ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು ಮತ್ತು ಅವರ ಉಳಿದ ಜೀವನವನ್ನು ಸಮಾಜ ಸೇವೆಗಾಗಿ ಮುಡಿಪಾಗಿಟ್ಟಿದ್ದರು. ಇಂದು ಡಿ ಎ ವಿ ಸುಮಾರು ೬೬೯ ಕಾಲೇಜುಗಳು, ಶಾಲೆಗಳು, ವೃತ್ತಿಪರ ಮತ್ತು ತಾಂತ್ರಿಕ ಶಿಕ್ಷಣ ಸ೦ಸ್ಥೆಗಳನ್ನು ನಡೆಸುತ್ತಿದೆ. == ಆರಂಭಿಕ ಜೀವನ ಮತ್ತು ಶಿಕ್ಷಣ == ಹಂಸರಾಜ್ ಅವರು ೧೯ ರ ಏಪ್ರಿಲ್ ೧೮೬೪ ರಂದು ಪಂಜಾಬ್‌ನ ಹೋಶಿಯಾರ್‌ಪುರ ಜಿಲ್ಲೆಯ ಬಜ್ವಾರದ ಖತ್ರಿ ಕುಟು೦ಬದಲ್ಲಿ ಜನಿಸಿದರು. ಹಂಸರಾಜ್ ಅವರಿಗೆ ೧೯ ವರ್ಷವಾಗುವುದಕ್ಕಿಂತ ಮುಂಚೆಯೇ ಅವರ ತಂದೆ ತೀರಿಕೊಂಡರು.ನ೦ತರ ಅವರನ್ನು ಅವರ ಹಿರಿಯ ಸಹೋದರ ಮುಲ್ಖ್ ರಾಜ್ ಅವರು ನೋಡಿಕೊ೦ಡರು. ತರುವಾಯ ಅವರ ಕುಟುಂಬವು ಲಾಹೋರ್‌ಗೆ ತೆರಳಿ ಅಲ್ಲಿ ಅವರು ಮಿಷನರಿ ಶಾಲೆಗೆ ಸೇರಿದರು. ಏತನ್ಮಧ್ಯೆ, ಅವರು ಸ್ವಾಮಿ ದಯಾನಂದರ ಉಪನ್ಯಾಸವನ್ನು ಕೇಳಿದರು. ಇದು ಅವರ ಜೀವನದ ಹಾದಿಯನ್ನು ಶಾಶ್ವತವಾಗಿ ಬದಲಾಯಿಸಿತು. ಅವರು ತಮ್ಮ ಬ್ಯಾಚುಲರ್ ಆಫ್ ಆರ್ಟ್ಸ್ (ಬಿ ಎ) ಪದವಿಯನ್ನು ಅತ್ಯುತ್ತಮ ಅಂಕಗಳೊಂದಿಗೆ ಮುಗಿಸಿದರು. == ವೃತ್ತಿ == ಅವರು ಬಿ ಎ ಮುಗಿಸಿದ ಮೇಲೆ ಕೆಲಸಕ್ಕೆ ಸೇರುವ ಬದಲು ಮೊದಲ ಡಿ ಎ ವಿ (ದಯಾನಂದ ಆಂಗ್ಲ - ವೈದಿಕ ಶಾಲೆ)ಯನ್ನು ಆರ್ಯ ಸಮಾಜದ ತಮ್ಮ ಸಹ ಸದಸ್ಯ ಗುರುದತ್ತ ವಿದ್ಯಾರ್ಥಿಯೊ೦ದಿಗೆ ಆರಂಭಿಸಲು ನಿರ್ಧರಿಸಿದರು. ನಂತರ ಅವರು ಲಾಹೋರ್‌ನ ದಯಾನಂದ ಆಂಗ್ಲ - ವೈದಿಕ ಕಾಲೇಜಿನ ಪ್ರಾಂಶುಪಾಲರಾದರು ಮತ್ತು ಪಂಜಾಬಿನಲ್ಲಿನ ಆರ್ಯ ಸಮಾಜದ ಡಿ ಎ ವಿ ವಿಭಾಗವಾದ ಪ್ರಾಂತೀಯ ಆರ್ಯ ಪ್ರಾದೇಶಿಕ ಪ್ರತಿನಿಧಿ ಸಭಾದ ಅಧ್ಯಕ್ಷರಾದರು. ೧೮೯೩ ರಲ್ಲಿ ಪಂಜಾಬ್‌ನಲ್ಲಿ ಆರ್ಯ ಸಮಾಜವು ಎರಡು ವಿಭಾಗವಾಯಿತು.ಲಾಲಾ ಹನ್ಸ್ ರಾಜ್ ಮತ್ತು ಲಾಲಾ ಲಜಪತ್ ರಾಯ್ ನೇತೃತ್ವದ ಒಂದು ವಿಭಾಗವು ಲಾಹೋರ್‌ನ ಡಿ ಎ ವಿ ಕಾಲೇಜಿನ ಮೇಲೆ ತನ್ನ ನಿಯಂತ್ರಣವನ್ನು ಉಳಿಸಿಕೊಂಡಿತು. ತೀವ್ರಗಾಮಿ ವಿಭಾಗವು ಪಂಡಿತ್ ಲೇಖ್ ರಾಮ್ ಮತ್ತು ಲಾಲಾ ಮುನ್ಶಿ ರಾಮ್ ( ಸ್ವಾಮಿ ಶ್ರದ್ಧಾನಂದ ) ಅವರ ನೇತೃತ್ವದಲ್ಲಿತ್ತು.ಸ್ವಾಮಿ ಶ್ರದ್ಧಾನಂದರು ಪಂಜಾಬ್ ಆರ್ಯ ಸಮಾಜವನ್ನು ರಚಿಸಿ ಆರ್ಯ ಪ್ರತಿನಿಧಿ ಸಭಾವನ್ನು ಮುನ್ನಡೆಸಿದರು. ಅವರು ಮುಂದಿನ ೨೫ ವರ್ಷಗಳ ಕಾಲ ಲಾಹೋರ್‌ನ ಡಿ ಎ ವಿ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು ಮತ್ತು ನಿವೃತ್ತಿಯ ನಂತರ ಅವರ ಉಳಿದ ಜೀವನವನ್ನು ಸಾಮಾಜಿಕ ಸೇವೆಗಾಗಿ ಮುಡಿಪಾಗಿಟ್ಟಿದ್ದರು. ಭಾರತದ ರಾಷ್ಟ್ರ ಧ್ವಜದ ಮಧ್ಯದಲ್ಲಿ ಅಶೋಕ ಧರ್ಮ ಚಕ್ರವು ಇರಲು ಸೂಚಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರು ೧೪ ನೇ ನವೆಂಬರ್ ೧೯೩೮ ರಂದು ಲಾಹೋರ್‌ನಲ್ಲಿ ನಿಧನರಾದರು. == ಪರಂಪರೆ == ಇಂದು, ಪ೦ಜಾಬ್ ನ ಜಾಲ೦ಧರ್ ನಲ್ಲಿರುವ ರಾಜ್ ಮಹಿಳಾ ಮಹಾ ವಿದ್ಯಾಲಯ,ದೆಹಲಿ ವಿಶ್ವವಿದ್ಯಾನಿಲಯದ ಪಂಜಾಬ್ ಹನ್ಸ್ ರಾಜ್ ಕಾಲೇಜು ಮತ್ತು ಅದೇ ವಿಶ್ವವಿದ್ಯಾನಿಲಯದ ಉತ್ತರ ಭಾಗದ ಕ್ಯಾಂಪಸ್‌ನ ಹೃದಯಭಾಗದಲ್ಲಿರುವ ಮಹಾತ್ಮ ಹನ್ಸ್ ರಾಜ್ ಕಾಲೇಜು ರಸ್ತೆಯೂ ಒಳಗೊ೦ಡ೦ತೆ ಅನೇಕ ಶಿಕ್ಷಣ ಸಂಸ್ಥೆಗಳಿಗೆ ಇವರ ಹೆಸರನ್ನು ಇಡಲಾಗಿದೆ. == ಇದನ್ನೂ ನೋಡಿ == ಆರ್ಯ ಸಮಾಜದ ಅನುಯಾಯಿಗಳು ಹಿಂದೂ ಸುಧಾರಕರು == ಹೆಚ್ಚಿನ ಓದಿಗೆ == ಸಾರ್ವಜನಿಕ ಆಡಳಿತ ಸಂಸ್ಥೆಯವರು ೧೯೬೫ ರಲ್ಲಿ ಪ್ರಕಟಿಸಿದ ಶ್ರೀ ರಾಮ್ ಶರ್ಮಾ ಅವರ ಮಹಾತ್ಮಾ ಹಂಸ್ ರಾಜ್ , ಮೇಕರ್ ಆಫ್ ದ ಮಾಡನ್ ಪಂಜಾಬ್ . ೧೯೯೭ ರಲ್ಲಿ ಕಲ್ಕತ್ತಾದ 'ಪಂಜಾಬಿ ಬ್ರ್ಯಡ್ರಿ' ಸ೦ಸ್ಥೆ ಪ್ರಕಟಿಸಿದ ಶ್ರೀ ಆರ್‌ ಎಂ ಚೋಪ್ರಾ ಅವರ 'ದ ಲೆಗಸಿ ಆಫ್ ದ ಪಂಜಾಬ್ ' ಪುಸ್ತಕದಲ್ಲಿ ಮಹಾತ್ಮ ಹಂಸರಾಜ್ ಅವರ ಕುರಿತಾದ ಒಂದು ಲೇಖನ. == ಬಾಹ್ಯ ಕೊಂಡಿಗಳು == ಹಂಸ್ ರಾಜ್: ಓರ್ವ ಪ್ರೇರೇಪಿಸುವ ಮಹಾತ್ಮ ಮಹಾತ್ಮ ಹಂಸ್ ರಾಜ್ == ಉಲ್ಲೇಖ ==